Friday, July 30, 2010

ಮುಂದೇನು?!!...

ಈ ದುಗುಡ ಇದ್ದದ್ದು ಯಾವತ್ತು ನಿಜ. ಮುಂದೆ ಏನು? . ರಾತ್ರಿ ಮೂರರ ನಿಷ್ಯಬ್ದದಲ್ಲೂ ಮೈಯೆಲ್ಲಾ ಬೆವರಿ ಎದೆಯಲ್ಲಿ ಸಣ್ಣ ನಡುಕ ಬಂದಾಗಲೇ ಅನಿಸಿತ್ತು, ಇನ್ನೂ ನಿದ್ದೆ ಬಾರದು, ಇಷ್ಟು ಹೊತ್ತು ಮಲಗಿದ್ದೆ ಜಾಸ್ತಿ, ಸಂಜೆಯ ಪ್ರತಿ ಘಳಿಗೆಗಳು ಒ೦ದರಮೇಲೊ೦ದು ಹಾಯ್ದು ಹೋದವು.

ನೀನೆಷ್ಟು ಹತ್ತಿರ ಅ೦ದುಕೊಳ್ಳೋದ್ರಲ್ಲೇ, ಏನಾಗಿದೆ ನನಗೆ ಅನ್ನೋ ಪ್ರಶ್ನೆ. ನಿನಗೆ ಹೇಗೆ ಹೇಳುವುದೋ ಗೊತ್ತಿಲ್ಲ. ಕಳೆದ ವಾರ ನಿನ್ನ ಭೇಟಿಯಾಗದೆ ಸುಮ್ಮನೆ ರೈಲು ಹತ್ತಿದಾಗ್, ಮನಸು ತಡೀಲಾರ್ದೆ ಎಸ್ ಎಂ ಎಸ್ ಕಳಿಸಿದ್ದೆ - ಗಣೇಶ್ ಬಂದ, ಹೋದ,
ದರ್ಶನ ಸಿಗಲಿಲ್ಲ! ಅಂತ, ಡಬ್ಬಿಯಲ್ಲಿದ್ದ ಅಮ್ಮನ ಮೋದಕ ಅಲುಗಾಡಿದ್ದು ಸುಳ್ಳಲ್ಲ.

ದಿನದ ಕೆಲಸದ ನಡುವೆ ಕೂಡ ನೀನು ಈಗೇನು ಮಾಡ್ತಿರಬಹುದು ಅಂತಾನೆ ಯೋಚನೆ. ನಿನ್ನ ಬಗ್ಗೆ ನಾನು ಯೋಚಿಸ್ತಾ ಇದ್ದೀನಿ, ಅದು ನಿನಗೆ ಗೊತ್ತಿಲ್ಲ ಅನ್ನೋ ಸಣ್ಣ ಬೇಸರ. ರಾತ್ರಿ ಊಟದ ನೆಪ ಮುಗಿದರೆ, ಬಾಲ್ಕನಿಯ ತುಂಬಾ ನಿನ್ನದೇ ಚಡಪಡಿಕೆ, ಈಗ ಯಾಕೆ ಹೇಳಬಾರದು ಅಂತ. ಹೇಳಬೇಕು ಅಂದ್ರುನೂ ಏನು ಅಂತಾ ಹೇಳೋದು.

ನಿನಗಿರೋದೆ ಎರಡು ದಾರಿ, ಒಂದು ನಾಚುತ್ತ 'ನಂಗು' ಅಂತೀಯ, ಇಲ್ಲಾ ನನ್ಗೋತ್ತಿಲ್ಲಪ್ಪಅಂತ ಕಣ್ಣಲ್ಲಿ ನೀರು ತರ್ತೀಯ. ಎರಡರಲ್ಲಿ ಒಂದು ನಿಜ. ಇವನ್ನು ಬಿಟ್ಟು ಬೇರೆ ಉತ್ತರ ನಿನ್ನಿಂದ ಬರೋಲ್ಲ ಅಂತ ಗೊತ್ತಿದ್ರು, ಆ ಮೂರನೆಯ ಉತ್ತರಕ್ಕೆ ಅದೆಷ್ಟು ಹೆದರಿದ್ದೆ ಅಂದ್ರೆ ತೂಕ ಕಡಿಮೆ ಆಗಿದ್ದು ಗೊತ್ತಾಗಿದ್ದೆ, ಚಪ್ಪಲಿ ಭಾರ ಅನಿಸಿದಾಗ. ಇವತ್ತು ಬೇಡ ನಾಳೆ, ನಾಳೆ ಸಂಜೆ, ಇಲ್ಲಾ ರಾತ್ರಿ ಅಂತ ಪ್ರತಿ ಘಳಿಗೆಯಲ್ಲಿ ನಿನ್ನ ಉತ್ತರವನ್ನ ಮನಸಿನಲ್ಲೇ ಮುಂದೆ ಹಾಕ್ತಾ ಇದ್ದೆ. ಕಡೆಗೆ ನನ್ನಲ್ಲೇ ಇದು ಹುದುಗಿ ಹೋಗ್ಲಿ ಅನ್ನೋವಷ್ಟು ನಿರಾಶೆ. ನಿನಗೆ ತಿಳಿಸೋ ರೀತಿ ಹೇಗಿರಬೇಕು ಅನ್ನೋದೇ ದೊಡ್ಡ ಪ್ರಶ್ನೆ. ಹೇಗೆ ಹೇಳಿದ್ರೆ ನಿನಗೆ ಖುಷಿ ಆಗ್ತದೆ, ಯಾವಾಗ ಹೇಳಿದ್ರೆ ನಿನ್ನ ಉತ್ತರ ನಂಗೆ ಬೇಸರ ತರಿಸಲ್ಲ ಅಂತ ತಲೆ ಕೆರೆದುಕೊಂಡಿದ್ದೆ.

ಇಷ್ಟಾಗಿ ಪ್ರೀತಿ ಹೇಳುವ ಘಳಿಗೆ ಅನ್ನೋದು ಕೇಳ್ಕೊಂಡು ಬರ್ಲಿಲ್ಲ, ಸುಮ್ಮನೆ ಕುಳಿತ ಬಂಡೆಯ ಜೊತೆ ಕೆಲವು ಎ೦ದಿನ ಮಾತುಗಳೇ ಸಾಕಿದ್ದವು. ಹೆಗಲ ಆಸರೆಯೇ ನೂರಾರು ಹೇಳದ ಮಾತುಗಳ ಪಿಸುಗುತ್ತಿತ್ತು. ಈಗಲೂ ನೆನಪುಗಳ ತಡಕಾಡಿ, ಕಳೆದ ಪ್ರತಿ ಕ್ಷಣಗಳನ್ನ ಹರವಿದ್ರೆ, ಹೇಳಿದ್ದು ನೀನಾ ಇಲ್ಲಾ ನಾನಾ ಅನ್ನೋದು ಗೊತ್ತೇ ಆಗಲ್ಲ. ಆ ಬ೦ಡೆ ಹತ್ತ ಬೇಕಾದ್ರೆನೆ ಪ್ರೀತಿಯ ಎತ್ತರ ಮುಟ್ಟಿದ್ವಾ? ಗೊತ್ತಿಲ್ಲ. ಸಂಗೀತ ಕೇಳಲಿಲ್ಲ, ಮೇಘಗಳು ಗರ್ಜಿಸಲಿಲ್ಲ, ಇದ್ದಿದ್ದು ತಿಳಿ ಗಾಳಿ ಮತ್ತೆ ಯಾವಾಗಲೋ
ಕೇಳಿಸುವ ನಂದಿಯ ಗಂಟೆ. ಮಾತಿನ ಮಧ್ಯದ ನಿಷ್ಯಬ್ದಗಳಿಗೆ ಇಷ್ಟೊಂದು ಸವಿ ಇರ್ತದೆ ಅಂತ ತಿಳಿದಿದ್ದೆ ಆಗ.

ದಾರಿಯಲ್ಲಿ ನಡೆಯುವಾಗ ನಿನ್ನ ಅಂಗೈ ಸೋಕಿ ನಾಳೆ ಹೇಗೇ ಇರಲಿ ನೀನಿರ್ತೀಯ ಅನ್ನೋ ಭರವಸೆ. ಮುಂದೆ ಏನು ಅನ್ನೋ ಪ್ರಶ್ನೆ ಕೆಲವು ಘಳಿಗೆ ಮರೆಯಾಗಿತ್ತು.

ಮಳೆಹನಿಯ ತುಂತುರು
ನಿಲ್ಲದಿರಲಿ ಈ ರಾತ್ರಿ
ಮನಸು ಜೊತೆಯಾಯ್ತು
ಮುಗಿಯದಿರಲಿ ಈ ದಾರಿ

3 Comments:

At 3:01 PM, Blogger  ಕನ್ನಡಬ್ಲಾಗ್ ಲಿಸ್ಟ್ KannadaBlogList said...

maanada maatugalige kavanagale saakshi..!
Uttama Hrudaya sparshi kavana.
Keep it up!

 
At 7:28 PM, Anonymous Anonymous said...

mugda manasina preethiya kangala bashege,mathinalli helalu agada mounada mansannu badidelisuva alemarige ee alemariya shubhasheyaglu........

 
At 7:48 PM, Anonymous Shantidoot said...

Beautiful lines sir....
Wish you would write more often...

 

Post a Comment

<< Home