Sunday, November 29, 2009

ಅರೆ ಘಳಿಗೆ ಬೇಕು...!

ಮೊದಲೆಲ್ಲ ಅನಿಸ್ತಿತ್ತು, ಮಾತೆಲ್ಲ ಮುಗಿದ ಮೇಲೆ ಉಳಿಯೋದು ಪ್ರೀತಿ ಅಂತ. ಆದ್ರೆ ಅದು ಮೌನ ಕೂಡ ಅಂತ ಈಗ ಮನವರಿಕೆ ಆಗಿದೆ. ಎಷ್ಟು ಗಾಢವಾದ ನಿಶ್ಯಬ್ದ ಅಂದ್ರೆ ನನ್ನ ಉಸಿರೇ ನನಗೆ ಕೇಳಿಸುವಷ್ಟು. ಎದೆ ಬಡಿತಗಳನ್ನು ಎಣಿಸಬಹುದು. ಕಣ್ಣು ಮುಚ್ಚಿ ಯೋಚನೆಗಳಿಗೆ ತಲೆ ಕೋಡೋಣ ಅಂದ್ರೆ ಅದೂ ಖಾಲಿ.


’ಟೈಮ್ ಎಷ್ಟಾಯ್ತು’ ಅಂತ ಪದೇ ಪದೇ ನಿನಗೆ ಕೇಳಿದ್ದೇ ಬಂತು. ಬೇರೆ ಮಾತುಗಳಿಗೆ ಹರಿವೇ ಇಲ್ಲ. ಎನೇ ಹೇಳ್ಬೇಕಂದ್ರೂ ಅದು ನಿನಗೆ ಗೊತ್ತೇ ಇದೆಯಲ್ಲ. ಎಲ್ಲ ಕ್ಷಣಗಳನ್ನ ನಿನ್ನ ಜೊತೆಯಲ್ಲೇ ಕಳೆದಿದ್ದಲ್ಲವೆ? ಈ ನಿಶ್ಯಬ್ದಗಳು ತಾಕಿದಾಗ ಮುಂದೇನು ಎಂಬ ಪ್ರಶ್ನೆ. ಮನಸು ಎಷ್ಟು ತುಂಬಿಕೊಂಡಿದೆ ಅಂದ್ರೆ ಅಲ್ಲಿ ಬೇರೆ ಜಾಗವೇ ಇಲ್ವೇನೊ ಅನಿಸ್ಬೇಕು.


ದಿನ-ರಾತ್ರಿಗಳು ಎಷ್ಟು ನಿರಾಯಾಸವಾಗಿ ಹೋಗ್ತಾ ಇವೆ ಅಂದ್ರೆ ಅಶ್ಚರ್ಯಕ್ಕಿಂತ ಅನುಮಾನವೇ ಜಾಸ್ತಿ. ಇಷ್ಟು ಸಲೀಸು ಅಂತ ಯಾವತ್ತೂ ಅನ್ಕೊಂಡಿರ್ಲಿಲ್ಲ. ಜೀವನ ಅಂದ್ರೆ ಹೋರಾಟ, ಹುಡುಕಾಟ, ದುಃಖ, ಆಯಾಸ ಅಂತೆಲ್ಲ ಅನ್ಕೊಂಡಿದ್ದೆ. ಅದು ಯಾವ್ದೂ ಇಲ್ಲದೇ ಹರಿವ ಜೋರು ನದಿಯಲ್ಲಿ ತೇಲ್ಕೊಂಡು ಹೋದಂಗಿದೆ, ನಿಂತು ಚಿಂತಿಸುವಷ್ಟು ವ್ಯವಧಾನವಿಲ್ಲದೆ!


ಕಳೆದ ಕೆಲವು ವರ್ಷಗಳು ನನ್ನವೇ ಅನ್ನೋವಷ್ಟು ಅಪರಚಿತ. ಬಾಳಿನ ಗುರಿ ಎಷ್ಟು ನಿಖರ ಅಂದ್ರೆ ದಾರಿ ಹುಡ್ಕೊ ಕಾರಣವೇ ಇಲ್ಲ. ಇಟ್ಟ ಪ್ರತಿ ಹೆಜ್ಜೆ ಒಂದೆ ದಿಕ್ಕಿಗೆ. ಮಂಜಿನಲ್ಲಿ ಹೊರಟ ಮೆರವಣಿಗೆ ಬಯಲಿನಲ್ಲಿ ಬಿಸಿಲು ಕಂಡ ಹಾಗೆ. ಮನಸಿನ ತಿಕ್ಕಾಟ, ವಿತಂಡವಾದ, ನಿರ್ಧಾರದ ಜವಾಬ್ದಾರಿ ಕಡೆಗೆ ಬೇಸರಿಕೆಯ ಮುನಿಸಿಗೆ ಕೂಡ ಅರೆ ಕ್ಷಣ ಸಿಗುತ್ತಿಲ್ಲ. ಒಂದೋ ಮನಸೆಲ್ಲ ಬರಿದಾಗಿದೆ, ಇಲ್ಲಾ ಬೇರೆ ಏನೂ ಹಿಡಿಸಲಾರದಷ್ಟು ಅದು ತುಂಬಿ ಹೋಗಿದೆ.


ಪ್ರಶ್ನೆ ಹಾಕಿದಷ್ಟು ವ್ಯವಧಾನ, ಉತ್ತರಗಳಿಗೆ ಇಲ್ವೇನೊ...


ಜೀವನಕ್ಕೊಂದು ಅರ್ಥ ಇರ್ಬೇಕು ನಿಜ, ಆದ್ರೆ ಒಂದೇ ಅರ್ಥ ಇರ್ಬೇಕು ಅಂತೇನೂ ಇಲ್ವಲ್ಲಾ.
ಹೊಸ ಆಯಾಮ ಹುಡುಕಬೇಕಿದೆ, ಅದಕ್ಕೂ ಮುನ್ನ ಒಂದಷ್ಟು ಕ್ಷಣಗಳನ್ನ ಕಾದಿರಿಸಬೇಕಿದೆ.


ಬೂದಿ ಆಗಿದ್ದು, ಸಾಕು ಇನ್ನು ಕೆಂಡವಾಗಬೇಕಿದೆ.....